ಮುಂಗಾರು 2025 ರ ಭೂಮಿ ತಯಾರಿಕೆ ಹೇಗಿರಬೇಕು?
ಅವಲೋಕನ ಮಾಡಿದಾಗ ಕೃಷಿಯ ನಿಜವಾದ ವಾಸ್ತವ ಸತ್ಯವೆಂದರೆ ಇಳುವರಿ ವೃದ್ಧಿಸುವುದು ಯಾವ ರೈತರಿಗೆ ಬೇಡ? ಇದು ಎಲ್ಲ ರೈತರಿಗೂ ಅವಶ್ಯ. ಆದರೆ ರೈತರಿಗೆ ಕೃಷಿ ಉತ್ಪಾದನೆಗೆ ಕೈಗೆಟುಕದ ಬೆಲೆ, ಬೇಕಾದಾಗ ಬಾರದ ಮಳೆ, ವಾತಾವರಣದಲ್ಲಿನ ಬದಲಾವಣೆಯ ಸಮಸ್ಯೆ ಒಂದೆ-ಎರಡೆ? ಆದರೂ, ಕೃಷಿಯೊಂದು ಜೀವನ ಕಾಯಕ, ಸುಮ್ಮನೆ ಕೂರಲಾಗುವುದಿಲ್ಲ, ಆದರೂ ಏನಾದರೂ ಎಂತಾದರೂ ಮಾಡಿ ಸಾಧಿಸಬೇಕೆನ್ನುವವರಿಗೇನೂ ಕಮ್ಮಿಯಿಲ್ಲ. ಇದರಿಂದಲೇ ಇಂದು ದೇಶದಲ್ಲಿ ದಾಖಲೆ ಮಟ್ಟದಲ್ಲಿ (350 ಕ್ಕೂ ಹೆಚ್ಚು ಮಿಲಿಯನ್ ಟನ್) ಆಹಾರ ಉತ್ಪಾದನೆ ಸಾಧ್ಯವಾಗಿದೆ. ಕೃಷಿ ಭೂಮಿಯು ಕ್ರಮೇಣವಾಗಿ ಕುಗ್ಗುತ್ತಿರುವ ಈ ಹಂತದಲ್ಲಿ ಎಕರೆವಾರು ಇಳುವರಿಯ ಹೆಚ್ಚಳ ಅನಿವಾರ್ಯ ಹಾಗೂ ಅಗತ್ಯವೆನಿಸಿದೆ.
ತಳಿ ತಜ್ಞರು ಬೆಳೆಗಳ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸುವ ಪ್ರಯತ್ನದಲ್ಲಿದ್ದರೆ, ಬೇಸಾಯ ತಜ್ಞರು ಮತ್ತು ರೈತರು ವಿವಿಧ ಉತ್ಪಾದನಾ ತಂತ್ರಜ್ಞಾನಗಳನ್ನು ಅನುಸರಿಸಿ ಬೆಳೆಯ ಇಳುವರಿ ಸಾಮರ್ಥ್ಯವನ್ನು ಸಾಧಿಸುವಲ್ಲಿ ತಲ್ಲೀನರಾಗಿದ್ದಾರೆ. ಆದಾಗ್ಯೂ ರಾಜ್ಯದ ಮತ್ತು ದೇಶದ ಸರಾಸರಿ ಇಳುವರಿಯನ್ನು ಅಂತರರಾಷ್ಟ್ರೀಯ ಮತ್ತು ಸಂಶೋಧನಾ ಕೇಂದ್ರ/ಉತ್ಪಾದನಾ ತಾಕುಗಳ ಇಳುವರಿಗೆ ಹೋಲಿಸಿದರೆ ಸಾಕಷ್ಟು ವ್ಯತ್ಯಾಸವಿದ್ದುದು ಗೋಚರವಾಗುತ್ತದೆ. ದೇಶದ ಪ್ರಮುಖ ಬೆಳೆಯಾದ ಭತ್ತದಲ್ಲಿ ರೈತರು ಪಡೆಯುತ್ತಿರುವ ಇಳುವರಿ ಮತ್ತು ಸಾಧ್ಯವಾಗಬಹುದಾದ ಉತ್ತಮ ಇಳುವರಿಯ ಮಧ್ಯದ ವ್ಯತ್ಯಾಸ ವಿವಿಧೆಡೆಗಳಲ್ಲಿ ಸುಮಾರು 15.5 ದಿಂದ 60 ಪ್ರತಿಶತದಷ್ಟಿದೆಯೆಂದು ವರದಿಯಾಗಿದೆ. ಅಂದರೆ ಸದ್ಯದ ರೈತರ ಕ್ಷೇತ್ರದ ಇಳುವರಿಯನ್ನು ಹೆಚ್ಚಿಸಲು ಸಾಕಷ್ಟು ಅವಕಾಶಗಳಿರುವುದನ್ನು ಈ ವ್ಯತ್ಯಾಸ ಧೃಡಪಡಿಸುತ್ತದೆ.
ಮುಂಗಾರಿನ ಪ್ರಾರಂಭಿಕ ಹಂತದಲ್ಲಿನ ಬೇಸಾಯ ಕ್ರಮಗಳು: ರೈತರು
ಮೊದಲಿನಿಂದಲೂ ಹದವಾದ ಭೂಮಿ ತಯಾರಿಕೆಗೆ ಒತ್ತು ಕೊಡುತ್ತಿದ್ದರು. ಕಾರಣ ಮಳೆಯ ನೀರು ಭೂಮಿಯಲ್ಲಿ ಸೇರಲಿ, ಭೂಮಿಯಲ್ಲಿ ಸೂಕ್ತ ಪ್ರಮಾಣದಲ್ಲಿ ನೀರು ಮತ್ತು ಹವೆಯ ಲಭ್ಯತೆ ಮತ್ತು ಬೀಜ ಮೊಳಕೆಗೆ ಸೂಕ್ತ ಉಷ್ಣತೆ ಅತಿಯಾದ ಮಳೆಯಾದಾಗ ಹೆಚ್ಚಿನ ನೀರು ಬಸಿದು ಹೋಗುತ್ತಿರಲಿ ಎಂಬ ಉದ್ದೇಶಗಳಿಂದ. ಗುಜರಾತಿನ ಒಣ ಬೇಸಾಯದಲ್ಲಿ ಪೂರ್ವದಲ್ಲಿ ತಲೆತಲಾಂತರಗಳಿಂದ ಬಂದ ನಿಗದಿತ ಸಾಲಿ (ಸೆಟ್ ರೋ) ನಲ್ಲಿಯೇ ಬಿತ್ತನೆ ಮಾಡುವುದು ಮತ್ತು ಗೊಬ್ಬರ ಒದಗಿಸುವ ಪದ್ಧತಿ ಬಳಕೆಯಲ್ಲಿತ್ತು. ಈ ಪದ್ಧತಿಯನ್ನು ಅನುಕರಣೆ ಮಾಡುವ ಸಂಶೋಧನೆಯೊಂದನ್ನು ವಿಜಯಪುರದ ಒಣ ಬೇಸಾಯ ಸಂಶೋಧನಾ ಕೇಂದ್ರದಲ್ಲಿ ಈ ಹಿಂದೆ ಕೈಗೊಳ್ಳಲಾಗಿತ್ತು.
ನಿಗದಿತ ಹರಿಗಳನ್ನು ಅಗಲದ ಅಂತರದಲ್ಲಿ (135 ಸೆಂ.ಮೀ.) ಭೂಮಿಯಲ್ಲಿ ಮಾಡಿ ಹರಿಗಳಲ್ಲಿ ಸಸ್ಯಾವಶೇಷಗಳನ್ನು ಹಾಕಿ ಬೆಳೆ ಬೇಸಾಯ ಮಾಡಲಾಯಿತು. ಈ ಕ್ರಮ ಭೂಮಿಯಲ್ಲಿ ನೀರನ್ನು ಬಹುದಿನಗಳವರೆಗೆ ಶೇಖರಿಸುವಲ್ಲಿ ಸಫಲವಾದುದರಿಂದ ಬೆಳೆ ಉತ್ಪಾದನೆ ಯಶಸ್ವಿಯಾಯಿತು ಮತ್ತು ಒಂದು ಬೆಳೆ ಬೆಳೆಯುವಲ್ಲಿ ಸರದಿಯಲ್ಲಿ ಸಜ್ಜೆ ಮತ್ತು ಸೂರ್ಯಕಾಂತಿಯ ಎರಡು ಬೆಳೆಗಳು ಸಾಧ್ಯವಾದವು. ಈ ಹರಿಗಳಲ್ಲಿ ಉಸುಕು ಹಾಕಿದರೆ ಏನಾಗುತ್ತದೆಯೆಂದು ನೋಡಲಾಗಿ, ಇಳುವರಿಯು ಕಡಿಮೆಯಾದುದು ಕಂಡು ಬಂದಿತು. ಕಾರಣ ಹರಿಯಲ್ಲಿ ಹೆಚ್ಚಿನ ನೀರು ಸಂಗ್ರಹವಾಗಿ ನೀರು ಬಸಿದು ಹೋಗುವಾಗ ಹಾಕಿದ ಗೊಬ್ಬರಗಳು ಬಸಿದು ಹೋಗಿ ಪೋಷಕಾಂಶದ ಕೊರತೆ ಉಂಟಾಯಿತು.
ಕಪ್ಪು ಕರ್ಲು ಭೂಮಿಯಲ್ಲಿ ಹೆಚ್ಚಿನ ರೇವೆ ಮತ್ತು ಸೋಡಿಯಮ್ ಪ್ರಮಾಣದಿಂದಾಗಿ ನೀರು ಭೂಮಿಯಲ್ಲಿ ಇಳಿಯುವುದು ತಡವಾಗುವುದರಿಂದ ಆದ ಮಳೆಯ ಬಹಳಷ್ಟು ಪಾಲು ನೀರು ಹರಿದುಹೋಗಿ ವ್ಯರ್ಥವಾಗುವುದು. ಈ ಕಾರಣಕ್ಕಾಗಿ ನೀರು ಹರಿದು ಹೋಗುವುದನ್ನು ತಡೆದು ಭೂಮಿಯ ಮೇಲೆ ನಿಲ್ಲುವಂತೆ ಮಾಡಿ ಭೂಮಿಯಲ್ಲಿ ಇಳಿಯಲು ಹೆಚ್ಚಿನ ಸಮಯ ಒದಗಿಸಲು ಗದಗ-ಕೊಪ್ಪಳ ಭಾಗದಲ್ಲಿ ಎರೆ ಜಮೀನುಗಳ ಮೇಲೆ ಹಳ್ಳದ ದಪ್ಪನಾದ ಉಸುಕಿನ 10-12 ಸೆಂ.ಮೀ. (ಅಂದಾಜು 100-120 ಟ್ರ್ಯಾಕ್ಟರ್ ಲೋಡ್) ಹೊದಿಕೆ ಹಾಕುವುದು ಸಾಮಾನ್ಯ.
ಇದರಿಂದಾಗಿ ಬಿದ್ದ ಮಳೆ ನೀರು ಅಲ್ಲಿಯೇ ಉಸುಕಿನಲ್ಲಿ ಉಳಿದು ನಿಧಾನವಾಗಿ ಭೂಮಿಯಲ್ಲಿ ಸೇರುತ್ತದೆ. ಹೀಗಾಗಿ ಮಳೆ ಸರಿಯಾಗಿ ಆಗದಿರುವಾಗ ಒಂದಾದರೂ ಬೆಳೆಯನ್ನು ಮತ್ತು ಸಾಮಾನ್ಯ ಮಳೆ ಬಂದಾಗ ಎರಡು ಬೆಳೆಗಳನ್ನು ರೈತರು ಪಡೆಯುತ್ತಿದ್ದಾರೆ. ಇದೊಂದು ಭೂಮಿ ಮತ್ತು ವಾತಾವರಣ ಜಾಣ್ನೆಯ ಕ್ರಮವೆನ್ನಬಹುದು. ಈ ಕ್ರಮವು ಶಿಫಾರಸು ಮಾಡಿದ ಚೌಕು ಮಡಿ ಮತ್ತು ಕಟ್ಟಿದ ಹರಿ ಪದ್ಧತಿಗಿಂತಲೂ ಉತ್ತಮವಾಗಿರುವುದಾಗಿ ಕಂಡು ಬಂದಿದೆ. ಆದರೆ ಮಳೆ ಹೆಚ್ಚಾದಾಗ ಭೂಮಿ ಸೇರಿದ ಹೆಚ್ಚಾದ ನೀರಿನ ಬಸಿಯುವಿಕೆಯಿಂದಾಗಿ ಸಾರಜನಕ ಬಸಿದು ಹೋಗಿ ಬೆಳೆಗಳ ಎಲೆಗಳು ಹಳದಿ ಬಣ್ಣಕ್ಕೆ ತಿರುಗುವುದು ಸಾಮಾನ್ಯವಾಗಿ ಕಂಡು ಬರುತ್ತದೆ.
ಒಣ ಬೇಸಾಯ
ಒಣ ಬೇಸಾಯದಲ್ಲಿ ಇಳುಕಲಿಗೆ ಅಡ್ಡಲಾಗಿ ಹರಿ ಮತ್ತು ಬೋದು ನಿರ್ಮಿಸುವ ಭೂಮಿ ಸಿದ್ಧತೆ ಇನ್ನೂ ಉತ್ತಮವೆಂದು ಹೇಳಬಹುದು. ಇದರಿಂದ ಬಿದ್ದ ಮಳೆ ಹರಿಯಲ್ಲಿ ಸಂಗ್ರಹವಾಗಿ ಭೂಮಿಯಲ್ಲಿ ಇಳಿದು ಬೆಳೆಗೆ ಸಿಗುವಂತೆ ಮಾಡುತ್ತದೆ. ಅದರಲ್ಲೂ ಈ ಹರಿಗಳಲ್ಲಿ ಅಲ್ಲಲ್ಲಿ ತಡೆಗಳನ್ನು (ಟೈಡ್ ರಿಡ್ರಿಸ್) ಮಾಡಿ ಹೆಚ್ಚು ನೀರು ನಿಲ್ಲುವಂತೆ ಮಾಡಬಹುದಾಗಿದೆ. ಹರಿ ಮತ್ತು ಬೋದು ಪದ್ಧತಿ ಇಂದಿನ ವಾತಾವರಣ ಬದಲಾವಣೆ ಸಮಯದಲ್ಲಿ ಅಂದರೆ ಏಕಕಾಲದಲ್ಲಾಗುವ ಅತೀ ಮಳೆಯಾಗಿ ಹೊಲದ ತುಂಬೆಲ್ಲ ನೀರು ನಿಂತು ಮಟ್ಟಮಾಡಿದ ಭೂಮಿಯಲ್ಲಿ ಗಾಳಿಯಾಡದೆ ಸಂವೇದನಶೀಲ ಬೆಳೆಗಳು ಸಾಯುವದನ್ನು ನೀರನ್ನು ಹರಿಯ ಮೂಲಕ ಹೊರ ಹಾಕುವ ಮೂಲಕ ತಡೆಯಲು ಸಹಾಯಕವಾಗುತ್ತವೆ. ಅಲ್ಲದೆ ಭೂಮಿಯ ಮೇಲೆ ಕ್ಷೇತ್ರ ಹೆಚ್ಚಾಗುವುದರಿಂದ ಭೂಮಿ ಬೇಗನೆ ಆರಲು ಮತ್ತು ಬೇರುಗಳಿಗೆ ಹೆಚ್ಚಿನ ಉಷ್ಣತೆಯನ್ನು ಒದಗಿಸಲು ಅನುಕೂಲವಾಗುತ್ತದೆ.
ಹೀಗಾಗಿ ಎರೆ ಭೂಮಿಯಲ್ಲಿ ವಿಶೇಷವಾಗಿ ಗಾಳಿಯಾಡುವಂತೆ ಮಾಡಿ ಉತ್ತಮ ಶೇಂಗಾ ಬೆಳೆ ಉತ್ಪಾದನೆಗೂ ಸಹಕಾರಿಯೆಂದು ಸಂಶೋಧನೆಗಳಿಂದ ತಿಳಿದು ಬಂದಿದೆ. ಹತ್ತಿ ಮತ್ತು ಮೆಣಸಿನಕಾಯಿ ಬೆಳೆ ಉತ್ಪಾದನೆಯಲ್ಲಿ ಹರಿ ಮತ್ತು ಬೋದು ಕ್ರಮದ ಬೇಸಾಯ ಮತ್ತು ನೀರಾವರಿ ಹೆಚ್ಚು ಪ್ರಯೋಜನಕಾರಿಯಾಗಿದೆ. ಇನ್ನೊಂದು ಉತ್ತಮ ಭೂಮಿ ಸಿದ್ದತಾ ಕ್ರಮವೆಂದರೆ ಹರಿ ಮತ್ತು ಹಾಸು (ಏರು ಮಡಿ) ಪದ್ಧತಿ. ಭೂಮಿಯಲ್ಲಿ ಇಳುಕಲಿಗೆ ಅಡ್ಡಲಾಗಿ ಸ್ವಲ್ಪ ಒರೆಯಾಗಿ (ಶೇ 0.2 – 0.5 ಇಳುಕಲು ಕೊಟ್ಟು) 25-30 ಸೆಂ.ಮೀ. ಅಗಲದ ಹರಿ ಮತ್ತು ಬಿತ್ತನೆಯ ಕೂರಿಗೆ/ಬೆಳೆಯ ಸಾಲುಗಳ ಅಂತರಕ್ಕೆ ಹೊಂದುವಂತೆ ಹಾಸುಗಳ ಅಗಲ (ಸಾಮಾನ್ಯವಾಗಿ 1.2ಮೀ ಅಂದರೆ 3-4 ಬೆಳೆ ಸಾಲುಗಳನ್ನು ಅಳವಡಿಸಲು ಸರಿಯಾಗುವಂತೆ) ಮತ್ತು 15 ಸೆಂ.ಮೀ. ಎತ್ತರವಿರುವಂತೆ ನಿರ್ಮಿಸಬೇಕು.
ಇಲ್ಲಿ ಮಳೆಯ ನೀರು ಹರಿಯಲ್ಲಿ ನಿಂತು ಹಾಸು ಒದ್ದೆಯಾಗಿಡಲು ಸಹಾಯವಾಗುತ್ತದೆ ಮತ್ತು ಅತಿಯಾದ ಮಳೆಯಾದಾಗ ಹೆಚ್ಚಿನ ನೀರು ಈ ಹರಿಗಳ ಮೂಲಕವೇ ಹೊಲಗಳಿಂದ ಹೊರಹಾಕಬಹುದು. ಮಿತವಾಗಿ ನೀರು ಹಾಯಿಸಿ ಹಾಸುಗಳನ್ನು ಒದ್ದೆ ಮಾಡಲು ಹರಿಗಳನ್ನು ಬಳಸಬಹುದು. ಈ ಕ್ರಮದಲ್ಲಿ ನೀರಾವರಿ ಮಾಡಿದಾಗ ಶೇ. 16-18 ರಷ್ಟು ನೀರಿನ ಉಳಿತಾಯವಾಗಿರುವುದು ಕಂಡುಬಂದಿದೆ. ಶೇಂಗಾ, ಸೋಯಾಅವರೆ, ತೊಗರಿ ಇತ್ಯಾದಿ ಬೆಳೆಗಳ ಇಳುವರಿ ಮಟ್ಟ ಇತರೆ ಜಮೀನಿನಲ್ಲಿ ಬೆಳೆದ ಬೆಳೆಗೆ ಹೋಲಿಸಿದಾಗ ಈ ಕ್ರಮದಿಂದಾಗಿ ಹೆಚ್ಚಾಗಿರುವುದು ಸಂಶೋಧನೆಗಳಿಂದ ಧೃಡಪಟ್ಟಿದೆ. ಶೇಂಗಾ ಇಳುವರಿ ಶೇ. 15 ರಷ್ಟು ಹೆಚ್ಚಾಗಿರುವುದು ಕೂಡ ವರದಿಯಾಗಿದೆ.
ಉತ್ತರ ಕರ್ನಾಟಕದ ಒಣ ಬೇಸಾಯ
ಉತ್ತರ ಕರ್ನಾಟಕದ ಒಣ ಬೇಸಾಯದಲ್ಲಿ ತೊಗರಿಯ ಬೇಸಾಯ ಸರ್ವೆ ಸಾಮಾನ್ಯ. ಹೀಗಾಗಿ ತೊಗರಿಯಲ್ಲಿ ಸಸಿ ನಾಟಿ ಪದ್ಧತಿಯ ಬಳಕೆಯಾಗಲಿ ಮತ್ತು ಬೆಳೆಗೆ ನೀರು ನೀಡುವುದಾಗಲಿ ಹೊಸ ವಿಚಾರಗಳೇ. ಪ್ಲಾಸ್ಟಿಕ್ ಚೀಲ (5-6 ಅಂಗುಲ ಗಾತ್ರದ) ಗಳಲ್ಲಿ ಬೆಳೆದ ಸುಮಾರು 25-30 ದಿನಗಳ ಸೂಕ್ತ ತಳಿಯ (ಬಿಎಸ್ಎಮ್ಆರ್ 736) ಸಸಿಗಳನ್ನು 5-6 ಅಡಿ ಅಗಲ ಮತ್ತು 3-6 ಅಡಿ ಸಸಿಯಿಂದ ಸಸಿ ಅಂತರವನ್ನಿಟ್ಟುಕೊಂಡು ಮೇ ತಿಂಗಳ ಕೊನೆಯಲ್ಲಿ ನಾಟಿ ಮಾಡಿ ಹನಿ ನೀರಾವರಿಯಲ್ಲಿ ಬೇಸಾಯ ಮಾಡಿ ಪ್ರತಿ ಎಕರೆಗೆ 15-18 ಕ್ವಿಂ. ಇಳುವರಿಯನ್ನು ಬೀದರ ಭಾಗದಲ್ಲಿ ರೈತರು ಪಡೆಯುತ್ತಿದ್ದಾರೆ. ಹೀಗಾಗಿ ಈ ಪದ್ಧತಿ ವಿವಿಧ ಪ್ರದೇಶಗಳಿಗೂ, ಸಮೀಪದ ಮಹಾರಾಷ್ಟ್ರ ರಾಜ್ಯಕ್ಕೂ ಹರಡುತ್ತಲಿದೆ. ತೊಗರಿಯಂತೆ ಬಿಟಿ ಹತ್ತಿಯಲ್ಲೂ ಸಸಿ ನಾಟಿ ಪದ್ಧತಿಯನ್ನು ಅಳವಡಿಸಿಕೊಳ್ಳಬಹುದಾಗಿದ್ದು ಅಚ್ಚು ಕಟ್ಟು ಪ್ರದೇಶದಲ್ಲಿ ತಡವಾಗಿ ಅಂದರೆ ಜುಲೈ ತಿಂಗಳ ಕೊನೆಯಲ್ಲಿ ಕಾಲುವೆ ನೀರು ಬಿಡುವುದರಿಂದ ಹತ್ತಿ ಬಿತ್ತನೆ ತಡವಾಗಿ ಇಳುವರಿ ಕಡಿಮೆಯಾಗುವುದು. ಇಂತಹ ಪ್ರದೇಶಗಳಲ್ಲಿ ಹತ್ತಿ ನಾಟಿ ಬೇಸಾಯ ಸೂಕ್ತ. ಎಕರೆಗೆ 15 ರಿಂದ 20 ಕ್ವಿಂ. ಇಳುವರಿ ಪಡೆಯಬಹುದಲ್ಲದೆ ಆದಾಯ ಶೇ. 39 ರಷ್ಟು ಅಧಿಕವಾಗಿರುವುದರಿಂದ ಸಸಿ ಬೆಳೆವ ಖರ್ಚನ್ನೂ ಸರಿದೂಗಿಸಬಹುದಾಗಿದೆ.
ಕೆರೆ/ಭಾವಿ ಅಥವಾ ಹಂಗಾಮು ಪೂರ್ವದ ಮಳೆ ನೀರನ್ನು ಬಳಸಿ ಸಸಿ ತಯಾರು ಮಾಡಲು ಸಾಧ್ಯವಿದ್ದರೆ ಈ ಕ್ರಮವನ್ನು ಅನುಸರಿಸಬಹುದಾಗಿದೆ. ಗಮನಿಸಬೇಕಾದ ವಿಷಯವೆಂದರೆ ಮೆಣಸಿನಕಾಯಿ, ಟೊಮೆಟೊಗಳಲ್ಲಿನಂತೆ ಮಣ್ಣುರಹಿತ ಸಸಿಗಳನ್ನು ಬಳಸದೆ ಮಣ್ಣುಬೇರು ಬೇರ್ಪಡಿಸದ ತೊಗರಿ ಮತ್ತು ಹತ್ತಿ ಸಸಿಗಳು ನಾಟಿಗೆ ಸೂಕ್ತ. ಯಾವುದೇ ಕಾರಣಕ್ಕೂ ಸಸಿಯ ಬೇರು ಮತ್ತು ಮಣ್ಣಿನ ಸಂಪರ್ಕವನ್ನು ಕದಡಬಾರದು. ಹೀಗೆ ನಾಟಿ ಪದ್ಧತಿಯಲ್ಲಿ ಹಂಗಾಮಿನಲ್ಲಿ ಬೇಗನೆ ನಾಟಿ ಮಾಡಲು ಸಾಧ್ಯವಾಗುವುದರಿಂದ ಬೆಳೆಯಲ್ಲಿ ಎಲೆಕೆಂಪು ರೋಗ ಕಡಿಮೆಯಾಗಿರುವುದು ವರದಿಯಾಗಿದೆ.
ಭತ್ತದ ಬೆಳೆ
ಭತ್ತದ ಬೆಳೆಯನ್ನು ನೋಡುವುದಾದರೆ ಅತಿ ಮಳೆಯಾಗುವಲ್ಲಿ ಮತ್ತು ಅಚ್ಚುಕಟ್ಟು ಪ್ರದೇಶಗಳಲ್ಲಿ ನಾಟಿ ಬೇಸಾಯ ಸಾಮಾನ್ಯವಾಗಿದ್ದು ಘಟ್ಟ ಪ್ರದೇಶದಲ್ಲಿ ಮಾತ್ರ ಮಳೆಗಾಲದ ಆರಂಭದ ಮುನ್ನವೇ (ಮೇ ತಿಂಗಳಲ್ಲಿ) ಭತ್ತವನ್ನು ಒಣ ಬಿತ್ತನೆ ಮಾಡಲಾಗುತ್ತದೆ (ಕೂರಿಗೆ ಭತ್ತ). ಆದರೆ ಈ ಕೂರಿಗೆ ಭತ್ತ ಬೇಸಾಯ ಕ್ರಮ ಇಂದು ಅಚ್ಚುಕಟ್ಟು ಪ್ರದೇಶಗಳಲ್ಲೂ ಕೈಗೊಳ್ಳುವುದು ಸೂಕ್ತ ಕ್ರಮವೆಂದು ರಾಯಚೂರು ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳು ಸಿಫಾರಸ್ಸು ಮಾಡಿದ್ದಾರೆ. ಮಳೆಗಾಲದ ಆರಂಭ ಇತ್ತಿತ್ತಲಾಗಿ ತಡವಾಗುತ್ತಿದ್ದು ಹೀಗಾಗಿ ಆಣೆಕಟ್ಟುಗಳಿಗೆ ನೀರು ತಡವಾಗಿ ಶೇಖರವಾಗುತ್ತಿರುವುದರಿಂದ ಕಾಲುವೆಗಳಿಗೆ ನೀರು ಹರಿಬಿಡುವುದು ತಡವಾಗುತ್ತಿದೆ.
ಜುಲೈ ಕೊನೆಯಲ್ಲಿ ನೀರು ಬಿಟ್ಟ ನಂತರ ಭೂಮಿ ತಯಾರಿಸಿ ನೀರು ಬಿಟ್ಟು ಗದ್ದೆ ಮಾಡಿ ಬೆಳೆ ನಾಟಿ ಮಾಡಬೇಕೆಂದರೆ ಆಗಸ್ಟ್-ಸಪ್ಟೆಂಬರ್ ಅಗುತ್ತದೆ. ಅದಕ್ಕಾಗಿ ಮುಂಗಾರಿ ಮಳೆ ಗಮನಿಸಿ ಗದ್ದೆ ಮಾಡದೆ ಸಮತಟ್ಟಾದ ಭೂಮಿಯಲ್ಲಿ ಇತರ ಬೆಳೆಗಳನ್ನು ಬಿತ್ತುವಂತೆ ಭತ್ತದ ಬೀಜವನ್ನು ಬಿತ್ತನೆ ಮಾಡಿ ಮುಂದೆ ಕಾಲುವೆಗಳಲ್ಲಿ ನೀರು ಬಂದಾಗ ನೀರನ್ನು ಹಾಯಿಸಲಾಗುತ್ತದೆ. ಈ ಕ್ರಮದಿಂದಾಗಿ ಕಡಿಮೆ ನೀರನ್ನು, ರಾಸಾಯನಿಕ ಗೊಬ್ಬರಗಳನ್ನು ಮತ್ತು ಡೀಜಲ್ ಇಂಧನ ಬಳಸಿ ನಾಟಿ ಭತ್ತಕ್ಕೆ ಸಮಾನಾದ ಇಳುವರಿ ಪಡೆಯಬಹುದಾಗಿದೆ. ಸುಮಾರು ಅರ್ಧದಷ್ಟು ಬೀಜ, 40-50 ಲೀಟರ ಡೀಜಲ್ ಮತ್ತು ಶೇ. 25-35 ರಷ್ಟು ನೀರು ಉಳಿತಾಯವಾಗುತ್ತದೆಯೆಂದು ಸಂಶೋಧನೆಗಳಿಂದ ಕಂಡು ಬಂದಿದೆ. ಏಕೆಂದರೆ ಇಲ್ಲಿ ಭೂಮಿಯನ್ನು ಗದ್ದೆ ಮಾಡಬೇಕಿಲ್ಲ ಮತ್ತು ನೀರು ಬಸಿಯುವಿಕೆ ಕಡಿಮೆಯಾಗುವುದರಿಂದ ಪೋಷಕಾಂಶಗಳು ಬಸಿದು ಪೋಲಾಗುವುದು ತಪ್ಪುತ್ತದೆ.
ಅಚ್ಚುಕಟ್ಟಿನ ಕೊನೆಯ ಹಂತದ ರೈತರಿಗೆ ಇದೊಂದು ವರದಾನವಾಗಿ ಪರಿಣಮಿಸಿದ್ದು ಅಂದಾಜು 60 -70 ಸಾವಿರ ಎಕರೆ ಪ್ರದೇಶದಲ್ಲಿ ಈ ಪದ್ಧತಿ ಸಧ್ಯಕ್ಕೆ ಬಳಕೆಯಲ್ಲಿದೆ. ಏನಿದ್ದರೂ ಎಸ್ಆರ್ಐ (ಸಿಸ್ಟಮ್ ಆಫ್ ರೈಸ್ ಇಂಟೆನ್ಸಿಫಿಕೇಶನ್) ಪದ್ಧತಿ (10-14 ದಿನಗಳ ಸಸಿ ನಾಟಿ) ಎಲ್ಲಕ್ಕಿಂತಲೂ ಉತ್ತಮ.
ಮೇಲೆ ವಿವರಿಸಲಾದ ಮುಂಗಾರಿನ ಆರಂಭಿಕ ಭೂಮಿ ತಯಾರಿ ಮತ್ತು ಇತರ ಬೇಸಾಯ ಕ್ರಮಗಳನ್ನು ಬೆಳೆಯನುಸಾರ ಅಳವಡಿಸಿಕೊಂಡಲ್ಲಿ ಉತ್ತಮ ಮಟ್ಟದ ಇಳುವರಿಯನ್ನು ಖಂಡಿತಾ ಪಡೆಯಬಹುದಾಗಿದೆ.